"ಭೂಮಿಯ ಮೇಲಿನ ಪ್ರತಿಯೊಂದು ವಸ್ತುವೂ ಸಕ್ಕರೆ ಮರಳುಗಳ ಮಿಶ್ರಣವೇ. ಬುದ್ದಿಶಾಲಿಯಾದ ಇರುವೆಯಂತೆ ಸಕ್ಕರೆಯನ್ನು ಮಾತ್ರ ಗ್ರಹಿಸಿ ಮರಳು ಕಣಗಳನ್ನು ಬಿಟ್ಟುಬಿಡಬೇಕು." — ಮಹಾವತಾರ ಬಾಬಾಜಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

Free Website Templates

Tuesday, January 26, 2010

ಭಾರತದ ಜ್ಞಾನಾವತಾರ




ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ
(೧೦ ಮೇ ೧೯೫೫- ಮಾರ್ಚ್ ೧೯೩೬)


ಇಂದು ಭಾರತದ ಜ್ಞಾನಾವತಾರವೆಂದು ಹೇಳಲಾದ ಸ್ವಾಮಿ ಶ್ರೀ ಯುಕ್ತೇಶ್ವರರ ಜಯಂತಿ. ಇವರ ಬಗ್ಗೆ ಬರೆಯಲು ಹೊರಟರೆ ದೊಡ್ಡ ಪುಸ್ತಕವೇ ಆಗುವುದು.
ಈ ಮಹಾತ್ಮರ ಬಗ್ಗೆ ತಿಳಿಯಬಯಸುವವರು ಪರಮಹಂಸ ಯೋಗಾನಂದರ "ಯೋಗಿಯ ಆತ್ಮ ಕಥೆ" (ಇಂಗ್ಲಿಷ್ ನಲ್ಲಿ "Autobiography of a Yogi" ಪುಸ್ತಕವನ್ನು ಓದಬಹುದು.
ಈ ಲೇಖನದಲ್ಲಿ ಅವರ ಬಗ್ಗೆ ಹೇಳಲಾದ ಕೆಲವು ಮಾತುಗಳನ್ನಷ್ಟೇ ಉಲ್ಲೇಖಿಸಿರುವೆ.
ಶ್ರೀಗಳು ಮೊದಲ ಬಾರಿಗೆ ತಮ್ಮ ಆಶ್ರಮಕ್ಕೆ ಬಂದ ತಮ್ಮ ಪ್ರಿಯ ಶಿಷ್ಯ ಪರಮಹಂಸ ಯೋಗಾನಂದರು ತಮ್ಮ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ " ನನ್ನ ವಂಶದ ಹೆಸರು ಪ್ರಿಯನಾಥ್ ಕರಾರ್. ಈ ಸಿರಾಂಪುರದಲ್ಲಿ ಹುಟ್ಟಿದೆ. ತಂದೆ ಶ್ರೀಮಂತ ವ್ಯಾಪಾರಿ. ಈಗ ನನ್ನ ಆಶ್ರಮವಾಗಿರುವ ಈ ಅನುವಂಶಿಕ ಭವನವನ್ನು ನನಗೆ ಬಿಟ್ಟು ಹೋದರು. ನನ್ನ ಸಾಂಪ್ರದಾಯಿಕವಾದ ಶಾಲಾಶಿಕ್ಷಣ ಬಹಳ ಕಡಿಮೆ. ನನ್ನ ಪಾಲಿಗೆ ಅದು ಮಂದಗತಿಯದೂ ಆಳವಿಲ್ಲದುದೂ ಆಗಿತ್ತು. ಯೌವನದ ಪ್ರಾರಂಭದಲ್ಲೇ ಗೃಹಸ್ಥನ ಹೊಣೆಗಾರಿಕೆಯನ್ನು ಹೊತ್ತೆ; ಒಬ್ಬಳು ಮಗಳಿದ್ದಾಳೆ, ಈಗ ಅವಳಿಗೆ ಮದುವೆಯಾಗಿದೆ. ನನ್ನ ನಡುಹರೆಯದ ಜೀವನ ವಾರಣಾಸಿಯ ಯೋಗಾವತಾರ ಶ್ರೀ ಲಾಹಿರಿ ಮಹಾಶಯರ ನೇತೃತ್ವದಿಂದ ಅನುಗ್ರಹೀತವಾಯಿತು. ನನ್ನ ಪತ್ನಿ ತೀರಿಕೊಂಡ ಮೇಲೆ ನಾನು ಸಂನ್ಯಾಸವನ್ನು ಸ್ವೀಕರಿಸಿದೆ. ಶ್ರೀ ಯುಕ್ತೇಶ್ವರ ಗಿರಿ ಎಂದು ನನಗೆ ಹೊಸ ನಾಮಕಾರಣವಾಯಿತು. ಇದೇ ನನ್ನ ಸರಳ ವೃತ್ತಾಂತ."
ಎಲ್ಲ ಜೀವನ ಚರಿತ್ರೆಗಳ ರೂಪರೇಷೆಗಳಂತೆಯೇ ಅವರ ಮಾತುಗಳು ಒಳಗಿನ ವ್ಯಕ್ತಿತ್ವವನ್ನು ತೋರದೆ ಹೊರಗಿನ ಸಂಗತಿಗಳನ್ನು ಮಾತ್ರ ಕೊಟ್ಟಿವೆ.
ಶ್ರೀ ಯುಕ್ತೇಶ್ವರರ ಮಹಾಸಮಾಧಿಯ ಸಂದರ್ಭದಲ್ಲಿ ಕೊಲ್ಕತಾದ ಪ್ರಮುಖ ದಿನಪತ್ರಿಕೆಯಾದ "ಅಮೃತ್ ಬಜಾರ್ ಪತ್ರಿಕಾ" ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾ "ಭಗವದ್ಗೀತೆಯ ಸುಪ್ರಸಿದ್ದ ವ್ಯಾಖ್ಯಾನಕಾರರಲ್ಲಿ ಒಬ್ಬರಾದ ಸ್ವಾಮೀಜಿಯವರು ವಾರಣಾಸಿಯ ಯೋಗಿರಾಜ ಶ್ರೀ ಶ್ಯಾಮ ಚರಣ ಲಾಹಿರಿ ಮಹಾಶಯರ ಶಿಷ್ಯರು. ಭಾರತದಲ್ಲಿ ಹಲವು ಯೋಗದಾ ಸತ್ಸಂಗ ಕೇಂದ್ರಗಳ ಸ್ಥಾಪಕರೂ , ತಮ್ಮ ಪ್ರಮುಖ ಶಿಷ್ಯರೂ ಆದ ಪರಮಹಂಸ ಯೋಗಾನಂದರು ಪಶ್ಚಿಮಕ್ಕೆ ಒಯ್ದ ಯೌಗಿಕ ಕಾರ್ಯಚಟುವಟಿಕೆಗಳಿಗೆ ಹಿನ್ನೆಲೆಯಲ್ಲಿ ಮಹಾಪ್ರೇರಕ ಶಕ್ತಿಯಾಗಿದ್ದವರೂ ಸ್ವಾಮೀಜಿಯವರೇ. ಶ್ರೀ ಯುಕ್ತೇಶ್ವರರ ಭವಿಷ್ಯ ನಿರ್ಮಾಣಶಕ್ತಿ ಹಾಗೂ ಗಾಢವಾದ ಸಿದ್ಧಿಯೇ ಸ್ವಾಮಿ ಯೋಗಾನಂದರನ್ನು ಪ್ರೇರಿಸಿ ಸಮುದ್ರಗಳನ್ನು ದಾಟಿ ಹೋಗಿ ಅಮೇರಿಕಾದಲ್ಲಿ ಭಾರತದ ಸಂತರ ಸಂದೇಶವನ್ನು ಪ್ರಚುರಪಡಿಸುವಂತೆ ಮಾಡಿದುದು.
"ಭಗವದ್ಗೀತೆ ಮತ್ತಿತರ ಧರ್ಮಗ್ರಂಥಗಳ ಮೇಲೆ ಅವರು ಬರೆದಿರುವ ವ್ಯಾಖ್ಯಾನವನ್ನು ನೋಡಿದರೆ ಪೌರಾತ್ಯ ಹಾಗೂ ಪಾಶ್ಚ್ಯಾತ್ಯ ದರ್ಶನದ ಮೇಲೆ ಶ್ರೀ ಯುಕ್ತೇಶ್ವರರು ಎಂಥಹಾ ಗಾಢವಾದ ಅಧಿಕಾರವನ್ನು ಪಡೆದಿದ್ದರೆಂದು ಪ್ರಮಾಣಿತವಾಗುತ್ತದೆ. ಅಲ್ಲದೆ ಪೂರ್ವ ಪಶ್ಚಿಮಗಳನ್ನು ಬೆಸೆಯಲು ಬಯಸುವವರಿಗೆ ಇದು ಕಣ್ಣು ತೆರೆಸಿದಂತಾದೀತು. ಎಲ್ಲಾ ಧಾರ್ಮಿಕ ಪಂಥಗಳನ್ನು ಒಟ್ಟುಗೂಡಿಸಬೇಕೆಂದು ಬಯಸುತ್ತಿದ್ದುದರಿಂದ ಶ್ರೀ ಯುಕ್ತೇಶ್ವರರು ಧರ್ಮದಲ್ಲಿ ವೈಜ್ಞಾನಿಕ ಧೋರಣೆಯನ್ನು ಬೋಧಿಸಲು ಅನುಕೂಲವಾಗುವಂತೆ ಎಲ್ಲಾ ಪಂಥಗಳ ಮುಖ್ಯಸ್ಥರ ಸಹಕಾರವನ್ನು ಪಡೆದು 'ಸಾಧು ಸಭಾ 'ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ತಮ್ಮ ದೇಹತ್ಯಾಗದ ಸಮಯದಲ್ಲಿ ತಮ್ಮ ಸ್ಥಾನದಲ್ಲಿ ಪರಮಹಂಸ ಯೋಗಾನಂದರನ್ನು ಸಾಧು ಸಭೆಯ ಅಧ್ಯಕ್ಷರನ್ನಾಗಿ ನಾಮಕರಣ ಮಾಡಿದರು..."
ಈ ಮಹಾತ್ಮರ ಜೀವನದ ವಿವರಗಳು ಇಂಗ್ಲಿಷ್ ಬಾಷೆಯಲ್ಲಿರುವ ಈ ಕೊಂಡಿಯಲ್ಲಿ ಉಚಿತವಾಗಿ ಲಭ್ಯವಿದೆ
http://www.anandaindia.org/inspiration/books/ay/index.html

No comments:

Post a Comment